ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬಡವರು ಮತ್ತು ರೈತರನ್ನು ಗಮನದಲ್ಲಿಟ್ಟುಕೊಂಡು, ಮಧ್ಯಮ ವರ್ಗದವರಿಗೆ ಲಾಭವಿಲ್ಲದ , ಶ್ರೀಮಂತರಿಂದ ಹೆಚ್ಚು ತೆರಿಗೆ ಸಂಗ್ರಹಿಸುವ ಉದ್ದೇಶದಿಂದ ಮೂರನೇ ಬಾರಿ 2016-17ರ ಕೇಂದ್ರ ಆಯವ್ಯಯವನ್ನು, 2016 ಫೆಬ್ರವರಿ 29ರಂದು, ಸೋಮವಾರ ಮಂಡಿಸಿದ್ದಾರೆ. == ಆರ್ಥಿಕ ಪ್ರಗತಿಗೆ 9 ಆಧಾರ ಸ್ತಂಭಗಳು == ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ದೇಶದ ಪ್ರಗತಿಗೆ ಸೂಚಿಸಿದ 9 ಆಧಾರ ಸ್ತಂಭಗಳು: ಕೃಷಿ, ಗ್ರಾಮೀಣ ಮೂಲಸೌಕರ್ಯ ವೃದ್ಧಿ, ಸಾಮಾಜಿಕ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ, ಕೌಶಲ ವೃದ್ಧಿ, ಉದ್ಯೋಗಾವಕಾಶ ಸೃಷ್ಟಿ, ಉದ್ಯಮ ಸ್ನೇಹಿ ನೀತಿ, ಆರ್ಥಿಕ ಶಿಸ್ತು, ತೆರಿಗೆ ಸುಧಾರಣೆ ಮತ್ತು ದೇಶವನ್ನು ಜ್ಞಾನದ ಕೇಂದ್ರವಾಗಿ ರೂಪಿಸುವುದು. ಜೇಟ್ಲಿ ವಿಶ್ವಾಸ: ಜಾಗತಿಕ ಆರ್ಥಿಕತೆಗಿಂತಲೂ ಭಾರತದ ಅರ್ಥ ವ್ಯವಸ್ಥೆ ಹೆಚ್ಚು ಸ್ಥಿರವಾಗಿದೆ. ಹೀಗಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಚಾಲ್ತಿ ಖಾತೆ ಹೊರೆಯು (ಸಿಎಡಿ) ಒಟ್ಟಾರೆ ಆಂತರಿಕ ಉತ್ಪಾದನೆಯ ಶೇ 1.4ಕ್ಕೆ ತಗ್ಗಲಿದೆ. ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಹೆಚ್ಚಿನ ಬಂಡವಾಳ ಒದಗಿಸಲು ಕ್ರಮ ಕೈಗೊಳ್ಳಲಿದೆ. 7ನೇ ವೇತನ ಆಯೋಗ ಮತ್ತು ಒಂದೇ ಶ್ರೇಣಿ ಒಂದೇ ಪಿಂಚಣಿ ಯೋಜನೆ ಜಾರಿಯಿಂದ ಮುಂದಿನ ಹಣಕಾಸು ವರ್ಷದಲ್ಲಿ ಹೆಚ್ಚಿನ ಆರ್ಥಿಕ ಹೊರೆ ಸರ್ಕಾರದ ಮೇಲೆ ಬೀಳಲಿದೆ. == ಕೇಂದ್ರ ಬಜೆಟ್ 2016-17: ತುಟ್ಟಿ-ಅಗ್ಗ == ಸಾಲಿನ ಬಜೆಟ್ ಮಂಡಿಸಿದ್ದು ಯಾವ ಸರಕುಗಳ ಬೆಲೆ ಏರಿಕೆಯಾಗಿದೆ ಮತ್ತು ಯಾವುದು ಅಗ್ಗವಾಗಿದೆ ಎನ್ನುವುದರ ವಿವರ: ತುಟ್ಟಿ::ತಂಬಾಕು ಉತ್ಪನ್ನಗಳು; ಬ್ರಾಂಡೆಡ್ ಬಟ್ಟೆಗಳು; ಐಷಾರಾಮಿ ಕಾರುಗಳು; ಗುಟ್ಕಾ(ಅಡಿಕೆ ಉತ್ಪನ್ನಗಳು); ಚಿನ್ನಾಭರಣ; ವಜ್ರಾಭರಣ ಅಗ್ಗ:ಬೀಡಿ; ಮದ್ಯ; ಬೆಳ್ಳಿ ಆಭರಣಗಳು; ಟಿವಿ; ಕಂಪ್ಯೂಟರ್; ರೆಫ್ರೀಜರೇಟರ್; ವಾಷಿಂಗ್‌ಮೆಷಿನ್; ಸೌಂದರ್ಯವರ್ಧಕಗಳು; ಮೊಬೈಲ್, ಟ್ಯಾಬ್ಲೆಟ್ ಗಳು; ಎ.ಸಿ; ಎಲ್.ಇ.ಡಿ.ಬಲ್ಬ್‌ಗಳು; ಪಾದರಕ್ಷೆಗಳು; ಡಯಾಲಿಸಿಸ್ ಯಂತ್ರಗಳ ಮೇಲಿನ ಸುಂಕ ಇಳಿಕೆ. == ತೆರಿಗೆ ಮತ್ತು ರಿಯಾಯತಿ == ಮೊದಲ ಮೂರು ವರ್ಷಗಳ ಕಾಲ ತೆರಿಗೆ ಕಟ್ಟಬೇಕಾಗಿಲ್ಲ, ಸ್ಟಾರ್ಟ್ ಅಪ್ ಗಳಿಗೆ ಶೇ 100ರಷ್ಟು ತೆರಿಗೆ ವಿನಾಯಿತಿ ಘೋಷಣೆ. ಐಷಾರಾಮಿ ವಸ್ತು ಮತ್ತು ಸೇವೆಗಳ ಮೇಲೆ ತೆರಿಗೆ ಹೆಚ್ಚಳ ಮಾಡಿದ್ದರೆ ಮೂಲಸೌರ್ಕಯಕ್ಕೆ ವಿನಾಯಿತಿ ತೋರಿಸಿದ್ದಾರೆ. ವಿವರಗಳು ಕೆಳಕಂಡಂತಿವೆ: == ಬಜೆಟ್ಟಿನ ಸಂಕ್ಷಿಪ್ತ ನೋಟ == ವರಮಾನ ಮತ್ತು ಕೊರತೆ - 2015-16 ರ ಹೋಲಿಕೆಯೊಮದಿಗೆ ಆಧಾರ: == ಬಜೆಟ್ಟಿನಲ್ಲಿ ಕೈಗಾರಿಕೆಗೆ ಪ್ರೋತ್ಸಾಹದ ಮುಖ್ಯಾಂಶಗಳು == ಸ್ಟಾರ್ಟ್ಅಪ್‌ಗಳಿಗೆ ಬಜೆಟ್‌ನಲ್ಲಿ ಭಾರಿ ಉತ್ತೇಜನಾ ಕ್ರಮ ಮತ್ತು ಆಕರ್ಷಕ ಕೊಡುಗೆಗಳನ್ನು ಘೋಷಿಸಲಾಗಿದೆ.ನವೋದ್ಯಮಗಳಿಗೆ ಮೊದಲ ಮೂರು ವರ್ಷ ಶೇಕಡ ನೂರರಷ್ಟು ತೆರಿಗೆ ವಿನಾಯ್ತಿ ನೀಡಲಾಗಿದೆ. ಏಪ್ರಿಲ್‌ 1, 2019ರ ಒಳಗಾಗಿ ಸ್ಥಾಪನೆಯಾಗುವ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಆಧಾರಿತ ನವೋದ್ಯಮಗಳು ಶೇಕಡಾ ನೂರರಷ್ಟು ತೆರಿಗೆ ವಿನಾಯ್ತಿ ಪಡೆಯಲಿವೆ. ನಿಧಿಗಳ ನಿಧಿ ಸ್ಥಾಪನೆ: ಸ್ಟಾರ್ಟ್‌ ಅಪ್‌ ಇಂಡಿಯಾ ಕ್ರಿಯಾ ಯೋಜನೆ ಅಡಿ ಹೊಸದಾಗಿ ‘ನಿಧಿಗಳ ನಿಧಿ’ ಸ್ಥಾಪಿಸುವುದಾಗಿ ಸರ್ಕಾರ ಹೇಳಿದೆ. ಈ ನಿಧಿ ಮೂಲಕ ವಾರ್ಷಿಕ ₹ 2,500 ಕೋಟಿಯಂತೆ ನಾಲ್ಕು ವರ್ಷ ಸಂಗ್ರಹಿಸಲಾಗುವ ಹಣವನ್ನು ಸ್ಟಾರ್ಟ್‌ ಅಪ್‌ಗಳಿಗೆ ಉತ್ತೇಜನ ನೀಡಲು ವಿನಿಯೋಗಿಸಲಾಗುವುದು. 500 ಕೋಟಿ: ‘ಸ್ಟ್ಯಾಂಡ್‌ ಅಪ್‌ ಇಂಡಿಯಾ’ ಯೋಜನೆ ಅಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡಲು ಬಜೆಟ್‌ನಲ್ಲಿ 500 ಕೋಟಿ ತೆಗೆದಿರಿಸಲಾಗಿದೆ. (‘ಸರ್ಕಾರದ ಈ ಕೊಡುಗೆ ಸ್ಟಾರ್ಟ್‌ ಅಪ್‌ಗಳ ಬೆಳವಣಿಗೆಗೆ ಪೂರಕವಾಗಿದೆ’ ಎಂದು ಅಂತರಜಾಲ ಮತ್ತು ಮೊಬೈಲ್‌ ಸಂಘದ ಅಧ್ಯಕ್ಷ ಸುಭೋ ರೇ ಅವರು ಪ್ರತಿಕ್ರಿಯಿಸಿದ್ದಾರೆ.) ಸ್ಟಾರ್ಟ್‌ಅಪ್‌ಗಳ ಪಿಎಫ್‌ಗೆ 1,000 ಕೋಟಿ ಕಾರ್ಪೊರೇಟ್ ತೆರಿಗೆ ಶೇ25ಕ್ಕೆ ಇಳಿಕೆ ದೇಶದಲ್ಲಿ ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಮತ್ತು ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವ ಉದ್ದೇಶದಿಂದ ಹೊಸದಾಗಿ ಸ್ಥಾಪನೆಯಾಗುವ ತಯಾರಿಕಾ ಕಂಪೆನಿಗಳಿಗೆ ಕಾರ್ಪೊರೇಟ್‌ ತೆರಿಗೆಯನ್ನು ಶೇ 25ಕ್ಕೆ ತಗ್ಗಿಸಲಾಗಿದೆ. ನಾಲ್ಕು ವರ್ಷದಲ್ಲಿ ಕಾರ್ಪೊರೇಟ್‌ ತೆರಿಗೆಯನ್ನು ಶೇ 30 ರಿಂದ ಶೇ 25ಕ್ಕೆ ಇಳಿಸುವ ಬಗ್ಗೆ ಈಗಾಗಲೇ ಘೋಷಿಸಲಾಗಿದೆ. ಅದರ ಮೊದಲ ಹೆಜ್ಜೆ ಇದಾಗಿದೆ ಮೊದಲ ಹಂತದಲ್ಲಿ ಕಾರ್ಪೊರೇಟ್ ತೆರಿಗೆಯಲ್ಲಿ ಎರಡು ಬದಲಾವಣೆಗಳನ್ನು ಜಾರಿಗೆ ತರಲಾಗುವುದು. 2016ರ ಮಾರ್ಚ್‌ 1 ರ ನಂತರ ಅಸ್ತಿತ್ವಕ್ಕೆ ಬರುವ ತಯಾರಿಕಾ ವಲಯಕ್ಕೆ ಸಂಬಂಧಿಸಿದ ಕಂಪೆನಿಗಳಿಗೆ ಶೇ 25ರಷ್ಟು ಕಾರ್ಪೊರೇಟ್‌ ತೆರಿಗೆ ನಿಗದಿ ಮಾಡಲಾಗಿದೆ. ಸಣ್ಣ ಘಟಕಗಳು ಅಂದರೆ ವಾರ್ಷಿಕವಾಗಿ ₹5 ಕೋಟಿ ವಹಿವಾಟು ನಡೆಸುವಂತಹ ಘಟಕಗಳಿಗೆ ಕಾರ್ಪೊರೇಟ್‌ ತೆರಿಗೆಯನ್ನು ಶೇ 30 ರಿಂದ ಶೇ 29ಕ್ಕೆ ಅಂದರೆ ಶೇ 1ರಷ್ಟು ಅಲ್ಪ ಇಳಿಕೆ ಮಾಡಲಾಗಿದೆ. ವಿಮಾನ ಪ್ರಯಾಣ ದುಬಾರಿ: ವಿಮಾನ ಇಂಧನಕ್ಕೆ (ಎಟಿಎಫ್‌) ಅಬಕಾರಿ ಸುಂಕವನ್ನು ಶೇ 6ರಷ್ಟು ಹೆಚ್ಚಿಸಲು ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಇದರಿಂದ ವಿಮಾನ ಪ್ರಯಾಣ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.ಆದರೆ, ಸ್ಥಳೀಯ ಸಂಪರ್ಕ ಯೋಜನೆಯಡಿ ದೇಶಿ ವಿಮಾನಯಾನ ಸಂಸ್ಥೆಗಳಿಗೆ ಇದು ಅನ್ವಯಿಸುವುದಿಲ್ಲ. ಸದ್ಯ, ಎಟಿಎಫ್‌ಗೆ ಶೇ 8ರಷ್ಟು ಅಬಕಾರಿ ಸುಂಕವಿದ್ದು, ಸರ್ಕಾರದ ಪ್ರಸ್ತಾವನೆಯಂತೆ ಶೇ 6ರಷ್ಟು ಹೆಚ್ಚಿಸಿದಲ್ಲಿ ಒಟ್ಟು ಸುಂಕವು ಶೇ 14ಕ್ಕೆ ಏರಿಕೆಯಾಗಲಿದೆ. ಕೇಂದ್ರದಿಂದಲೇ ಪಿಎಫ್‌: ಉದ್ಯೋಗಿಗಳು ಹೊಸದಾಗಿ ಕೆಲಸಕ್ಕೆ ಸೇರಿದ ಮೊದಲ ಮೂರು ವರ್ಷ ಅವರ ಪಿಎಫ್‌ ಖಾತೆಗೆ (ಭವಿಷ್ಯನಿಧಿ ಯೋಜನೆ)ಮೂಲ ವೇತನದ ಶೇ 8.33 ರಷ್ಟು ಹಣವನ್ನು ಉದ್ಯೋಗದಾತ ಕಂಪೆನಿಗಳ ಬದಲು ತಾನೇ ಪಾವತಿಸುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ. ಸರ್ಕಾರದ ಈ ನಿರ್ಧಾರದಿಂದ ತೆರಿಗೆ ಪಾವತಿಸುವ ಉದ್ಯೋಗದಾತ ಕಂಪೆನಿಗಳು ನಿರಾಳವಾಗಿವೆ. ಹೊಸದಾಗಿ ಕೆಲಸಕ್ಕೆ ಸೇರಿದ ಉದ್ಯೋಗಿಯ ಖಾತೆಗೆ ಮೊದಲ ಮೂರು ವರ್ಷ ಆತನ ಮೂಲವೇತನದ ಶೇ 8.33 ರಷ್ಟು ಹಣವನ್ನು ಸರ್ಕಾರ ಪಾವತಿಸಿದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಗೆ ನಾಂದಿ ಹಾಡಿದಂತಾಗುತ್ತದೆ ಎಂದು ಸಚಿವ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿ ಬಜೆಟ್‌ನಲ್ಲಿ 1 ಸಾವಿರ ಕೋಟಿ ತೆಗೆದಿರಿಸಲಾಗಿದೆ. ಪ್ರತಿ ತಿಂಗಳು ಗರಿಷ್ಠ 15 ಸಾವಿರ ಇಲ್ಲವೇ ಅದಕ್ಕಿಂತ ಕಡಿಮೆ ವೇತನ ಪಡೆಯುವ ಉದ್ಯೋಗಿಗಳಿಗೆ ಮಾತ್ರ ಈ ಸೌಲಭ್ಯಗಳು ಅನ್ವಯವಾಗುತ್ತವೆ. == ಗ್ರಾಮ ಮತ್ತು ಕೃಷಿಗೆ ಉತ್ತೇಜನ == ಕೃಷಿಗೆ ಅನುದಾನ ರೂ.47,912 ಕೋಟಿ ಈ ಬಾರಿ 2016-17ಕ್ಕೆ; ಕಳೆದ ಬಾರಿ ರೂ,25,988 ಕೋಟಿ ಗೊಬ್ಬರ ಸಬ್ಸಿಡಿ ರೈತರ ಖಾತೆಗೆ: ರಸಗೊಬ್ಬರ ಸಬ್ಸಿಡಿ ಇನ್ನು ಮುಂದೆ ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ಜಮಾ ಆಗಲಿದೆ. ಸಬ್ಸಿಡಿ ಮಧ್ಯವರ್ತಿಗಳ ಪಾಲಾಗುವುದನ್ನು ತಪ್ಪಿಸುವ ಉದ್ದೇಶದಿಂದ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಅಡುಗೆ ಅನಿಲ ಸಬ್ಸಿಡಿಯನ್ನು ಸದ್ಯ ಗ್ರಾಹಕರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತಿದೆ. ಅದೇ ಮಾದರಿಯಲ್ಲಿ ರಸಗೊಬ್ಬರ ಸಬ್ಸಿಡಿ ಪಾವತಿಸಲಾಗುತ್ತದೆ. ಈ ಬಾರಿಯ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ರೂ.35,984 ಕೋಟಿ ಅನುದಾನ ನೀಡಿದ್ದು, 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶ ಹೊಂದಲಾಗಿದೆ. 28.5 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ: ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಬಲಪಡಿಸುವ ಮೂಲಕ 28.5 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ತ್ವರಿತ ನೀರಾವರಿ ಅಭಿವೃದ್ಧಿ ಯೋಜನೆಯಡಿ 89 ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದು, 23 ಯೋಜನೆಗಳನ್ನು 2017ರ ಮಾರ್ಚ್‌ 31ರ ಒಳಗೆ ಪೂರ್ಣಗೊಳಿಸಲಾಗುತ್ತದೆ. ಈ ಯೋಜನೆಗೆ ಪ್ರಸಕ್ತ ವರ್ಷ ರೂ.17 ಸಾವಿರ ಕೋಟಿ ನೀಡಲಾಗಿದೆ. ಮುಂದಿನ 5 ವರ್ಷಗಳಲ್ಲಿ ರೂ.86,500 ಕೋಟಿ ಅನುದಾನ ನೀಡಲಾಗುತ್ತದೆ. ನಬಾರ್ಡ್‌ ನೆರವಿನಡಿ ದೀರ್ಘಾವಧಿ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರೂ.20 ಸಾವಿರ ಕೋಟಿ ನಿಧಿ ಸ್ಥಾಪನೆ. ಬಜೆಟ್‌ ಮೂಲಕ ರೂ.12,517 ಕೋಟಿ ಅನುದಾನ. ಅಲ್ಲದೆ ಮಾರುಕಟ್ಟೆಯಲ್ಲಿ ಬಾಂಡ್‌ಗಳ ಮೂಲಕ ಹಣ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಅಂತರ್ಜಲದ ಸಮರ್ಥ ನಿರ್ವಹಣೆಗೆ ರೂ.6 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಕೃಷಿ ಹೊಂಡಗಳ ನಿರ್ಮಾಣಕ್ಕೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುದಾನ ಬಳಕೆಗೆ ಅವಕಾಶ ನೀಡಲಾಗಿದೆ. 2017ರ ಮಾರ್ಚ್‌ ಒಳಗೆ 14 ಕೋಟಿ ರೈತರ ಹೊಲಗಳ ಮಣ್ಣಿನ ತಪಾಸಣೆ. ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ ಯೋಜನೆಯಡಿ ಇದಕ್ಕಾಗಿ ರೂ.368 ಕೋಟಿ ಅನುದಾನ ಹಂಚಿಕೆಯ ಯೋಜನೆ. ಏಕೀಕೃತ ಕೃಷಿ ಮಾರುಕಟ್ಟೆ : ಏ.14ರಂದು ಚಾಲನೆ: ಎಪಿಎಂಸಿಗಳಲ್ಲಿ ಆನ್‌ಲೈನ್‌ ಆಧಾರಿತ ಮಾರಾಟ ವಹಿವಾಟು ನಡೆಸುವ ಏಕೀಕೃತ ಕೃಷಿ ಮಾರುಕಟ್ಟೆ ಯೋಜನೆಗೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವಾದ ಏಪ್ರಿಲ್ 14ರಂದು ಚಾಲನೆ ನೀಡಲಾಗುತ್ತದೆ. ಆನ್‌ಲೈನ್‌ ಮಾರಾಟ–ಖರೀದಿ ಯೋಜನೆಯು ಈಗಾಗಲೇ ಕರ್ನಾಟಕದಲ್ಲಿ ಜಾರಿಯಲ್ಲಿದೆ. ಇದನ್ನು ರಾಷ್ಟ್ರವ್ಯಾಪಿ ಅನುಷ್ಠಾನಗೊಳಿಸಲು ಕೇಂದ್ರ ಮುಂದಾಗಿದೆ. ದೇಶದ ಆಯ್ದ 585 ನಿಯಂತ್ರಿತ ಸಗಟು ಮಾರಾಟ ಮಾರುಕಟ್ಟೆಗಳಲ್ಲಿ ಈ ಯೋಜನೆ ಜಾರಿಯಾಗಲಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವ 12 ರಾಜ್ಯಗಳು ಈ ಯೋಜನೆಯಡಿ ಬಂದಿವೆ. ಮುಂದಿನ ದಿನಗಳಲ್ಲಿ ಉಳಿದ ರಾಜ್ಯಗಳೂ ಕಾಯ್ದೆಗೆ ತಿದ್ದುಪಡಿ ತಂದು ಯೋಜನೆಯಡಿ ಸೇರಿಕೊಳ್ಳಲಿವೆ. ರೈತರಿಗೆ ಸೌಲಭ್ಯಗಳು: ರೈತರಿಗಾಗಿ ಜಾರಿಗೊಳಿಸಿರುವ ‘ಫಸಲ್‌ ಭಿಮಾ ಯೋಜನೆ’ಗೆ ರೂ.5,500 ಕೋಟಿ. ದೇಶದ ವಿವಿಧ ಭಾಗಗಳ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸಲು ಮೂರು ನಿರ್ದಿಷ್ಟ ಕಾರ್ಯಕ್ರಮ; 1. ವಿಕೇಂದ್ರೀಕರಣ ಖರೀದಿ ವ್ಯವಸ್ಥೆ ಹೊಂದಿರದ ರಾಜ್ಯಗಳಲ್ಲಿ ಯೋಜನೆ ಅನುಷ್ಠಾನ; 2. ಭಾರತ ಆಹಾರ ನಿಗಮದ ಮೂಲಕ ‘ಆನ್‌ಲೈನ್‌ ಖರೀದಿ ವ್ಯವಸ್ಥೆ ’. ಇದರಿಂದ ಪಾರದರ್ಶಕತೆ, ರೈತರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಮತ್ತು ಮಾಹಿತಿ ಪಡೆಯಲು ಅನುಕೂಲವಾಗಲಿದೆ. 3. ದ್ವಿದಳ ಧಾನ್ಯಗಳ ಖರೀದಿಗೆ ಪರಿಣಾಮಕಾರಿ ವ್ಯವಸ್ಥೆ ಜಾರಿ. ರೈತರಿಗೆ ಸಕಾಲದಲ್ಲಿ ಸಾಲ ಒದಗಿಸಲು ಪ್ರಸಕ್ತ ವರ್ಷದಲ್ಲಿ ರೂ.9 ಲಕ್ಷ ಕೋಟಿ ಮೀಸಲು. ರೈತರು ಉಪಕಸುಬುಗಳನ್ನು ಕೈಗೊಳ್ಳಲು ಪ್ರೋತ್ಸಾಹ. ಹೈನುಗಾರಿಕೆ ಉತ್ತೇಜನಕ್ಕೆ ‘ಪಶುಧನ ಸಂಜೀವಿನಿ’ (ಸಾಕುಪ್ರಾಣಿಗಳ ಆರೋಗ್ಯ ರಕ್ಷಣೆ), ‘ಆಧುನಿಕ ತಳಿ ಅಭಿವೃದ್ಧಿ’, ‘ಇ–ಪಶುಧನ ಹಾತ್‌’ (ತಳಿ ಅಭಿವೃದ್ಧಿಪಡಿಸುವವರು ಮತ್ತು ರೈತರ ನಡುವೆ ಸಂಪರ್ಕ), ದೇಶೀಯ ತಳಿ ಜಾನುವಾರುಗಳ ಅಭಿವೃದ್ಧಿಗೆ ರಾಷ್ಟ್ರೀಯ ತಳಿ ಕೇಂದ್ರ ಸ್ಥಾಪನೆ. ರೂ.850 ಕೋಟಿ ವೆಚ್ಚದಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ಈ ಎಲ್ಲ ಯೋಜನೆಗಳ ಜಾರಿ. 2014–15 ನೇ ಸಾಲಿನಲ್ಲಿ ಜೇನು ಉತ್ಪಾದನೆ ಪ್ರಮಾಣ 76,150 ಮೆಟ್ರಿಕ್‌ ಟನ್‌ನಿಂದ 86,500 ಮೆಟ್ರಿಕ್‌ ಟನ್‌ಗೆ ಹೆಚ್ಚಿದೆ. ಶೇಕಡ 90ರಷ್ಟು ಜೇನು ರಫ್ತು ಮಾಡಲಾಗುತ್ತಿದೆ. ಬೇಳೆಕಾಳುಗಳ ಉತ್ಪಾದನೆಯನ್ನು ಉತ್ತೇಜಿಸಲು ರಾಷ್ಟ್ರೀಯ ಆಹಾರ ಭದ್ರತೆ ಮಿಷನ್‌ ಮೂಲಕ ₹ 500 ಕೋಟಿ ಅನುದಾನ. 622 ಜಿಲ್ಲೆಗಳಿಗೆ ಈ ಯೋಜನೆ ವಿಸ್ತರಣೆ. 674 ಕೃಷಿ–ವಿಜ್ಞಾನ ಕೇಂದ್ರಗಳ ಕಾರ್ಯನಿರ್ವಹಣೆ ಮತ್ತು ದಕ್ಷತೆ ಹೆಚ್ಚಿಸಲು ರಾಷ್ಟ್ರಮಟ್ಟದ ಸ್ಪರ್ಧೆ. ಪ್ರಶಸ್ತಿಯ ಒಟ್ಟು ಮೊತ್ತ ರೂ.50 ಲಕ್ಷ. ಪ್ರಸಕ್ತ ವರ್ಷದಲ್ಲಿ ಗೋದಾಮುಗಳಲ್ಲಿ 97 ಲಕ್ಷ ಮೆಟ್ರಿಕ್‌ಟನ್‌ ವರೆಗೆ ಶೇಖರಣಾ ಸಾಮರ್ಥ್ಯ ಹೆಚ್ಚಳ. ಪ್ರಧಾನಮಂತ್ರಿ ಗ್ರಾಮೀಣ ಸಡಕ್‌ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ ರೂ.19,000 ಕೋಟಿ ಅನುದಾನ. ರಾಜ್ಯಗಳ ಅನುದಾನವೂ ಸೇರಿ ಒಟ್ಟು ಮೊತ್ತ ರೂ.27,000 ಕೋಟಿ ವೆಚ್ಚ. 2.23 ಲಕ್ಷ ಕಿ.ಮೀ ರಸ್ತೆ ನಿರ್ಮಿಸಿ 65,000 ಗ್ರಾಮೀಣ ವಸತಿ ಪ್ರದೇಶಗಳಿಗೆ ಸಂಪರ್ಕ. ರಾಷ್ಟ್ರೀಯ ಗ್ರಾಮ ಸ್ವರಾಜ್ಯ ಅಭಿಯಾನಕ್ಕೆ ರೂ.655 ಕೋಟಿ. ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸುವ ಉದ್ದೇಶದಿಂದ ಪಂಚಾಯತ್ ರಾಜ್ಯ ಸಂಸ್ಥೆಗಳ ಆಡಳಿತ ಸಾಮರ್ಥ್ಯ ಹೆಚ್ಚಿಸಲು ಈ ಆಂದೋಲನ ಹಮ್ಮಿಕೊಳ್ಳಲಾಗುತ್ತದೆ. ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಗೊಳಿಸಲು 14ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬಜೆಟ್ ಅನುದಾನವನ್ನು ಹೆಚ್ಚಿಸಲಾಗಿದೆ. 2016–17ನೇ ಹಣಕಾಸು ವರ್ಷದಲ್ಲಿ ಒಟ್ಟು ರೂ.287 ಲಕ್ಷ ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಈ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಗೆ ರೂ.80 ಲಕ್ಷ ಮತ್ತು ಪ್ರತಿ ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ರೂ.21 ಕೋಟಿ ಅನುದಾನ ನೀಡಲಾಗುತ್ತದೆ. (ಈ ಅನುದಾನ ಬಳಕೆಯ ಮಾರ್ಗದರ್ಶಿ ಸೂತ್ರಗಳನ್ನು ಪಂಚಾಯತ್‌ರಾಜ್‌ ಇಲಾಖೆಯು ರಾಜ್ಯ ಸರ್ಕಾರಗಳ ಜತೆ ಸಮಾಲೋಚಿಸಿ ರೂಪಿಸಲಿದೆ.) ನರೇಗಾಕ್ಕೆ ಹೆಚ್ಚುವರಿ ರೂ.3,800 ಕೋಟಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ (ನರೇಗಾ) ಈ ವರ್ಷ ರೂ.3,800 ಕೋಟಿ ಹೆಚ್ಚಿಗೆ ಅನುದಾನ ನೀಡಲಾಗಿದೆ. ಕಳೆದ ವರ್ಷದ ಬಜೆಟ್‌ನಲ್ಲಿ ನರೇಗಾಕ್ಕೆ ರೂ.34,699 ಕೋಟಿ ಮೀಸಲಿಡಲಾಗಿತ್ತು. ಅದನ್ನು ರೂ.38,500 ಕೋಟಿಗೆ ಏರಿಸಲಾಗಿದೆ. ಇದರ ಜತೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಿಧಿಯ ವಾಸ್ತವ ಬಳಕೆಯ ಆಧಾರದಲ್ಲಿ ರೂ.5 ಸಾವಿರ ಕೋಟಿ ಒದಗಿಸುವ ಭರವಸೆ ನೀಡಲಾಗಿದೆ. ಯುಪಿಎ ಸರ್ಕಾರ ಜಾರಿಗೊಳಿಸಿದ್ದ ಈ ಯೋಜನೆಯನ್ನು ಹಿಂದೆ ಬಿಜೆಪಿ ಟೀಕಿಸಿತ್ತು. ಆದರೆ, ಈಗ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ನರೇಗಾಕ್ಕೆ ಹೆಚ್ಚಿನ ಅನುದಾನ ನೀಡಿದೆ. ಇತ್ತೀಚೆಗೆ ಪ್ರಧಾನಿ ಅವರು ಉದ್ಘಾಟಿಸಿರುವ ಶಾಂ ಪ್ರಸಾದ್ ಮುಖರ್ಜಿ ರೂರಲ್‌ ಅರ್ಬನ್ (ಹಳ್ಳಿ ಪಟ್ಟಣ ಅಭಿವೃದ್ಧಿ) ಯೋಜನೆಯಡಿ 300 ಕೇಂದ್ರಗಳು ಹಳ್ಳಿಗಳ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಿವೆ. ಪರಂಪರಾಗತ್‌ ಕೃಷಿ ವಿಕಾಸ ಯೋಜನೆ ಸಾವಯವ ಕೃಷಿಗೆ ಒತ್ತು ನೀಡುವ ಉದ್ದೇಶದಿಂದ ಎರಡು ಹೊಸ ಯೋಜನೆಗಳನ್ನು ಪ್ರಕಟಿಸಲಾಗಿದೆ. ‘ಪರಂಪರಾಗತ್‌ ಕೃಷಿ ವಿಕಾಸ ಯೋಜನೆ’ಯಡಿ ಮುಂದಿನ ಮೂರು ವರ್ಷಗಳಲ್ಲಿ 5 ಲಕ್ಷ ಹೆಕ್ಟೇರ್‌ನಲ್ಲಿ ಸಾವಯವ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಲಾಗುತ್ತದೆ. ಈಶಾನ್ಯ ವಲಯದಲ್ಲಿ ಸಾವಯವ ಕೃಷಿಗೆ ಉತ್ತೇಜನ, ರಫ್ತಿಗೆ ಉತ್ತೇಜನ ನೀಡಲು ನಿರ್ಧರಿಸಿದ್ದು, ಇದಕ್ಕಾಗಿ ರೂ.412 ಕೋಟಿ ಅನುದಾನ ನೀಡಲಾಗಿದೆ. ಗ್ರಾಮೀಣ ಭಾರತದತ್ತ ಒಲವು ಸ್ವಚ್ಛ ಭಾರತಕ್ಕೆ ಪ್ರಸಕ್ತ ಸಾಲಿನಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸ್ವಚ್ಛ ಭಾರತ ಆಂದೋಲನಕ್ಕೆ ರೂ.11,300 ಸಾವಿರ ಕೋಟಿ ಮೀಸಲಿಡಲಾಗಿದೆ. ಮುಖ್ಯವಾಗಿ ಗ್ರಾಮೀಣ ಭಾರತದಲ್ಲಿ ಶೌಚಾಲಯ ಮತ್ತು ಸ್ವಚ್ಛತೆಯನ್ನು ಸುಧಾರಿಸಲು ಈ ಯೋಜನೆಗೆ ಹೆಚ್ಚಿನ ಹಣ ಒದಗಿಸಲಾಗಿದೆ. ‘ಸ್ವಚ್ಛತೆಯ ವಿಷಯವು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹೃದಯಕ್ಕೆ ತುಂಬಾ ಹತ್ತಿರವಾಗಿತ್ತು’ ಎಂದು ಜೇಟ್ಲಿ ಹೇಳಿದರು. ವಿದ್ಯುತ್ ಸಂಪರ್ಕ: ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಮತ್ತು ಸಮಗ್ರ ಇಂಧನ ಅಭಿವೃದ್ಧಿ ಯೋಜನೆಯನ್ವಯ ರೂ.8,500 ಕೋಟಿ ವೆಚ್ಚದಲ್ಲಿ 2018ರ ಮೇ ವೇಳೆಗೆ ಗ್ರಾಮೀಣ ಪ್ರದೇಶದಲ್ಲಿ ಶೇ 100ರಷ್ಟು ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ. 2015ರ ಏಪ್ರಿಲ್ 1ರವರೆಗೂ 18,542 ಗ್ರಾಮಗಳಿಗೆ ವಿದ್ಯುತ್ ಸೌಕರ್ಯವಿರಲಿಲ್ಲ. ಫೆಬ್ರುವರಿ 23ರವರೆಗೆ 5,542 ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಮೀಣರಿಗೆ ಡಿಜಿಟಲ್‌ ಸಾಕ್ಷರತೆ: ರಾಷ್ಟ್ರೀಯ ಡಿಜಿಟಲ್‌ ಸಾಕ್ಷರತಾ ಯೋಜನೆ ಮತ್ತು ಡಿಜಿಟಲ್ ಸಾಕ್ಷರತಾ ಅಭಿಯಾನಗಳಿಗೆ (ದಿಶಾ) ಈಗಾಗಲೇ ಅನುಮತಿ ನೀಡಿದ್ದು, ಗ್ರಾಮೀಣ ಭಾರತಕ್ಕಾಗಿ ನೂತನ ಡಿಜಿಟಲ್ ಸಾಕ್ಷರತಾ ಯೋಜನೆ ಪ್ರಾರಂಭಿಸುವ ಉದ್ದೇಶ ಪ್ರಕಟಿಸಲಾಗಿದೆ. ಈ ಯೋಜನೆಯು ಮುಂದಿನ ಮೂರು ವರ್ಷಗಳ ಒಳಗೆ ಸುಮಾರು ಆರು ಕೋಟಿ ಗ್ರಾಮೀಣ ಮನೆಗಳನ್ನು ಒಳಗೊಳ್ಳಲಿದೆ. ಭೂ ದಾಖಲೆ ಆಧುನೀಕರಣ: ಭೂ ದಾಖಲೀಕರಣಗಳನ್ನು ವಿವಾದ ಮುಕ್ತಗೊಳಿಸಲು ಆಧುನೀಕರಣದ ಅಗತ್ಯತೆಯನ್ನು ಪ್ರತಿಪಾದಿಸಿರುವ ಕೇಂದ್ರ, ಇದಕ್ಕಾಗಿ ಬಜೆಟ್‌ನಲ್ಲಿ ರೂ.150 ಕೊಟಿ ಅನುದಾನ ನೀಡಿದೆ. ಡಿಜಿಟಲ್ ಇಂಡಿಯಾ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಭೂ ದಾಖಲೆಗಳ ಆಧುನೀಕರಣ ಯೋಜನೆ 2016ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಪರಮಾಣು ವಿದ್ಯುತ್‌ಗೆ ರೂ.3,000 ಕೋಟಿ ಪರಮಾಣು ವಿದ್ಯುತ್‌ ಯೋಜನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಪರಮಾಣು ವಲಯಕ್ಕೆ ವಾರ್ಷಿಕ ₹3 ಸಾವಿರ ಕೋಟಿ ಹಂಚಿಕೆ ಮಾಡಲಾಗುತ್ತದೆ. ಪರಮಾಣು ವಿದ್ಯುತ್ ಉತ್ಪಾದನೆಯಲ್ಲಿ ಹೂಡಿಕೆ ವೃದ್ಧಿಸಲು ಮುಂದಿನ 15–20 ವರ್ಷಗಳ ಸಮಗ್ರ ಯೋಜನೆಯನ್ನು ಕೇಂದ್ರ ಸಿದ್ಧಪಡಿಸುತ್ತಿದೆ. ಮುದ್ರಿತ ಪ್ರತಿ ವಿತರಣೆಗೆ ವಿದಾಯ: ಮೊದಲ ಬಾರಿಗೆ ಬಜೆಟ್‌ನ ಮುದ್ರಿತ ಪ್ರತಿಯನ್ನು ಹಂಚಲಿಲ್ಲ. ಇದುವರೆಗೆ ಪಾಲಿಸುತ್ತ ಬಂದಿದ್ದ ಸಂಪ್ರದಾಯವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮುರಿದಿದ್ದಾರೆ. ಪರಿಸರ ಸಂರಕ್ಷಣೆಯ ಕ್ರಮವಾಗಿ ಸಂಸತ್ ಭವನ ಮತ್ತು ನೂತನ ಮಾಧ್ಯಮ ಕೇಂದ್ರದಲ್ಲಿ ಬಜೆಟ್ ಮುದ್ರಿತ ಪ್ರತಿಗಳನ್ನು ಹಂಚಲಿಲ್ಲ. ಬಜೆಟ್ ಪ್ರತಿಯನ್ನು ಪಿಐಬಿ ಮತ್ತು ಹಣಕಾಸು ಸಚಿವಾಲಯದ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗಿತ್ತು. ಹಣಕಾಸು ಸಚಿವರು ಬಜೆಟ್ ಪ್ರತಿ ಓದಿದ ನಂತರ 15 ಮುದ್ರಿತ ಪ್ರತಿಗಳನ್ನು ಸಂಸತ್ ಸದಸ್ಯರಿಗೆ ವಿತರಿಸಲಾಯಿತು. ಕಳೆದ ವರ್ಷದವರೆಗೆ ವಿಶೇಷವಾಗಿ ವಿತರಿಸಲಾಗುತ್ತಿದ್ದ ಕೂಪನ್‌ ನೀಡಿದ ನಂತರ ಬಜೆಟ್ ಪ್ರತಿಯನ್ನು ಸಂಸತ್ ಭವನದ ಕೌಂಟರ್ ಮತ್ತು ಮಾಧ್ಯಮ ಕೇಂದ್ರದಲ್ಲಿ ವಿತರಿಸಲಾಗುತ್ತಿತ್ತು. ಸಕಾರಾತ್ಮಕ ಬೆಳವಣಿಗೆ: ಆಸಾವಯವ ಕೃಷಿಯನ್ನು ನೀತಿ ರೂಪದಲ್ಲಿ ಅಳವಡಿಸಿಕೊಂಡಿರುವುದು 12 ರಾಜ್ಯಗಳಲ್ಲಿ ಮಾತ್ರ. ಅದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ಸಾವಯವ ಕೃಷಿ ಪದ್ಧತಿ ಅಸ್ತಿತ್ವದಲ್ಲಿದ್ದರೂ, ಕೇಂದ್ರ ಸರ್ಕಾರ ಪ್ರತಿ ವರ್ಷ ಸಾವಯವ ಕೃಷಿ ಉತ್ತೇಜನಕ್ಕೆ ಸ್ವಲ್ಪವೇ ಹಣ ತೆಗೆದಿರಿಸುತ್ತಿತ್ತು. ಆದರೆ, ಪ್ರಸಕ್ತ ಸಾಲಿನ ಬಜೆಟ್ಟಿನಲ್ಲಿ 5 ಲಕ್ಷ ಎಕರೆಗೆ ಯೋಜನೆ ವಿಸ್ತರಿಸುತ್ತಿರುವುದು, ಸದ್ಯ ರಾಜ್ಯಗಳಲ್ಲಿರುವ ಸಾವಯವ ಕೃಷಿ ಪದ್ಧತಿಯನ್ನು ಉತ್ತೇಜಿಸಿದಂತಾಗಿದೆ. ಈ ಉತ್ತೇಜನದಿಂದ ಸಾವಯವ ಕೃಷಿಕರು ಸ್ವಾವಲಂಬನೆ ಸಾಧಿಸಬಹುದು. ಔಷಧ ಮುಕ್ತ ಆಹಾರ ಉತ್ಪಾದಿಸುವವರ ಸಂಖ್ಯೆ ಹೆಚ್ಚಾಗಲು, ಇದು ಒಂದು ಹೆಜ್ಜೆಯಾಗಬಹುದು. ಇಂಥ ಯೋಜನೆಗಳು ವಿಸ್ತರಣೆಯಾದಲ್ಲಿ ಸಾವಯವ ಕೃಷಿ ಉತ್ಪನ್ನಗಳ ಬೇಡಿಕೆ ಮತ್ತು ಪೂರೈಕೆ ಅಂತರ ಕಡಿಮೆಯಾಗುವ ಸಾಧ್ಯತೆಗಳಿವೆ. == ಆದಾಯ ತೆರಿಗೆ 2016-17 == ಆದಾಯ ತೆರಿಗೆ ಸ್ಲಾಬ್ ನಲ್ಲಿ ಯಾವ ಬದಲಾವಣೆ ಇಲ್ಲ. ವಾರ್ಷಿಕ 2.5 ಲಕ್ಷ ತಲಾ ಆದಾಯಕ್ಕೆ ತೆರಿಗೆಯಿಲ್ಲ. 2.5 ಲಕ್ಷ ದಿಂದ 5 ಲಕ್ಷ ವಾರ್ಷಿಕ ಆದಾಯ ಶೇ. 10 ತೆರಿಗೆ 5 ರಿಂದ 10 ಲಕ್ಷ ರು. ವಾರ್ಷಿಕ ಆದಾಯ ಶೇ. 20 ತೆರಿಗೆ 10 ಲಕ್ಷ ರು. ಮೇಲ್ಪಟ್ಟು ವಾರ್ಷಿಕ ಆದಾಯ ಶೇ. 30 ತೆರಿಗೆ [ಯಾವುದು ಏರಿಕೆ? ಯಾವುದು ಇಳಿಕೆ?] ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಸಿಹಿಸುದ್ದಿ. 80 ಜಿಜಿ ಅನ್ವಯ ಟ್ಯಾಕ್ಸ್ ಡಿಡಕ್ಷನ್ ಮಿತಿ 24 ರಿಂದ 60 ಸಾವಿರ ಏರಿಕೆ. ಆದರೆ ಬಾಡಿಗೆ ಮನೆಯಲ್ಲಿ ವಾಸಮಾಡುತ್ ತಿರುವವರು ಸ್ವಂತ ಮನೆ ಹೊಂದಿರಬಾರದು. ಮೊದಲ ಸಾರಿ ಗೃಹ ಸಾಲ ಮಾಡುವವರಿಗೂ ಸಿಹಿ ಸುದ್ದಿ ಸಿಕ್ಕಿದ್ದು 35 ಲಕ್ಷ ಸಾಲ ಪಡೆದುಕೊಂಡ ವೇಳೆ ಕಟ್ಟುವ 50 ಸಾವಿರ ಹೆಚ್ಚುವರಿ ಬಡ್ಡಿಗೆ ತೆರಿಗೆ ವಿನಾಯಿತಿ ಲಭ್ಯವಾಗಲಿದೆ. ಚಿಕ್ಕ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ನೆರವಿಗೆ ನಿಂತಿರುವ ಜೇಟ್ಲಿ ವಾರ್ಷಿಕ 2 ಕೋಟಿ ರು. ವಹಿವಾಟು ನಡೆಸುವ ಕಂಪನಿಗಳಿಗೆ ಕೆಲ ವಿನಾಯಿತಿಗಳನ್ನು 44 ಎಡಿ ಅನ್ವಯ ನೀಡಿದೆ. === ವಿವರ === 5 ಲಕ್ಷ ರು ಆದಾಯವಿದ್ದವರಿಗೆ ಏಪ್ರಿಲ್ 2016 ರಿಂದ ಮಾರ್ಚ್ 31, 2017ರ ತನಕ ತೆರಿಗೆ ಪಾವತಿ ವರ್ಷವಾಗಿದೆ. ಜುಲೈ 31, 2017 ರ ತನಕ ಆದಾಯ ತೆರಿಗೆ ಪಾವತಿಗೆ ಅವಕಾಶವಿರುತ್ತದೆ. 2016-17 ರ ಇದಾಗಿರುತ್ತದೆ.[ತೆರಿಗೆ ಉಳಿಸಲು ಎಚ್‌ಡಿಎಫ್‌ಸಿ ಯುಲಿಪ್‌ನಲ್ಲಿ ಹೂಡಿಕೆ ಮಾಡಿ] ಈ ಬಾರಿ ಬಜೆಟ್ ನಲ್ಲಿ ತೆರಿಗೆ ಪಾವತಿ ಮಿತಿ ಬದಲಾಯಿಸಿಲ್ಲ. ಹಾಗಾಗಿ, ಯಾವುದೇ ತೆರಿಗೆ ಪಾವತಿಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ. ತೆರಿಗೆ ದರವು ಸರ್ ಚಾರ್ಜ್, ಎಜುಕೇಷನ್ ಸೆಸ್, ಸೆಕಂಡರಿ ಹಾಗೂ ಉನ್ನತ ಶಿಕ್ಷಣ ಸೆಸ್ ನಿಂದ ಹೊರತುಪಡಿಸಲಾಗಿದೆ. == ಆರೋಗ್ಯ 2016-17ರ ಬಜೆಟ್`ನಲ್ಲಿ == ಬಡ, ಮಧ್ಯಮ ವರ್ಗಗಳಿಗೆ ಭರವಸೆ: ಸಚಿವ ಅರುಣ್‌ ಜೇಟ್ಲಿ ಅವರು ‘ಜನೌಷಧ’ ಕಾರ್ಯಕ್ರಮದಡಿ 2017ರಲ್ಲಿ ಹೊಸದಾಗಿ 3,000 ಅಗ್ಗದ ಜೆನೆರಿಕ್‌ ಔಷಧಿ ಮಳಿಗೆಗಳನ್ನು ತೆರೆಯುವುದಾಗಿ ಘೋಷಿಸಿದ್ದಾರೆ. ಇದು ಬಡ ಮತ್ತು ಮಧ್ಯಮ ವರ್ಗದ ಜನರಲ್ಲಿ ತುಸು ನೆಮ್ಮದಿ ಮೂಡಿಸುವ ನಿರ್ಧಾರ ಎಂದು ವೈದ್ಯಕೀಯ ಕ್ಷೇತ್ರ ತಜ್ಞರು ವಿಶ್ಲೇಷಿಸುತ್ತಾರೆ. ಜೆನೆರಿಕ್ ಔಷಧಿ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಇತ್ತೀಚೆಗೆ ‘ಜನ ಸಂಜೀವಿನಿ’ ಹೆಸರಿನಲ್ಲಿ ಕೇಂದ್ರ ಸರ್ಕಾರ ಸ್ವಾಮ್ಯದ ಹಿಂದೂಸ್ತಾನ್‌ ಹೆಲ್ತ್‌ಕೇರ್‌ ಲಿಮಿಟೆಡ್‌ (ಎಚ್‌ಎಲ್‌ಎಲ್‌) ಕಂಪೆನಿ ಸಹಯೋಗದಲ್ಲಿ ಪುನರುಜ್ಜೀವನಗೊಳಿಸುತ್ತಿದೆ. ರಾಜ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಅಡಿ ತಲಾ 20 ರಂತೆ ಒಟ್ಟು 40 ಜೆನೆರಿಕ್‌ ಔಷಧಿ ಮಳಿಗೆ ತೆರೆಯಲು ಉದ್ದೇಶಿಸಲಾಗಿದೆ. ಆ ಪೈಕಿ ಸದ್ಯ, ಬೆಂಗಳೂರಿನ ವಿಕ್ಟೋರಿಯಾ, ಕೆ.ಸಿ.ಜನರಲ್‌ ಮತ್ತು ಬೌರಿಂಗ್ ಆಸ್ಪತ್ರೆಗಳಲ್ಲಿ ಜೆನೆರಿಕ್‌ ಮಳಿಗೆಗಳು ವಹಿವಾಟು ನಡೆಸುತ್ತಿವೆ. ಮೈಸೂರು, ಉಡುಪಿ, ಮಂಗಳೂರು ಸೇರಿದಂತೆ ಇನ್ನು ಅನೇಕ ಕಡೆಗಳಲ್ಲಿ ಮಳಿಗೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಶೀಘ್ರದಲ್ಲಿಯೇ ಈ ಮಳಿಗೆಗಳು ಕಾರ್ಯಾರಂಭ ಮಾಡಲಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಈ ಮಳಿಗೆಗಳಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳೂ ಔಷಧ ಖರೀದಿಸಬಹುದು. ಔಷಧ ನಿಯಂತ್ರಣ ಇಲಾಖೆಯು ಈ ಮಳಿಗೆಗಳ ಮೇಲೆ ಹಿಡಿತ ಹೊಂದಿರುತ್ತದೆ. ಔಷಧದ ಬೆಲೆಯನ್ನು ಸರ್ಕಾರವೇ ನಿಗದಿಪಡಿಸುತ್ತದೆ. ಹಾಗಾಗಿ ಗ್ರಾಹಕರಿಗೆ ಮೋಸವಾಗುವುದಿಲ್ಲ. ದಿನದ 24 ಗಂಟೆಗಳೂ ಎಲ್ಲ ವರ್ಗದ ಜನರಿಗೂ ಶೇ 50ರಷ್ಟು ರಿಯಾಯಿತಿ ದರದಲ್ಲಿ ಜೆನೆರಿಕ್‌ ಔಷಧಿ ದೊರೆಯುವುದರಿಂದ ಇದು ಬಡವರ ಪಾಲಿಗೆ ವರದಾನ. ಜೆನೆರಿಕ್ ಔಷಧ ಎಂದರೆ, ಒಂದೇ ಔಷಧಿ ಬೇರೆ ಬೇರೆ ಹೆಸರಿನಲ್ಲಿ ಮಾರುಕಟ್ಟೆಗೆ ಬಂದರೂ, ಅದರಲ್ಲಿನ ಮೂಲ ಅಂಶ ಒಂದೇ ಇರುತ್ತದೆ. ಔಷಧಗಳ ಮೇಲೆ ಆಯಾ ಕಂಪೆನಿಗಳ ಹೆಸರು ಬಳಸದೇ ಕೇವಲ ರಾಸಾಯನಿಕಗಳ ಹೆಸರಿನಿಂದ ಕರೆಯುವ ಔಷಧಿಗಳಿಗೆ ಜೆನೆರಿಕ್ ಎನ್ನುತ್ತಾರೆ. ಮಹಿಳೆಯರ ಆರೋಗ್ಯಕ್ಕಾಗಿ ಅಡುಗೆ ಅನಿಲ ಸಂಪರ್ಕ ಮಹಿಳೆಯ ಹೆಸರಿನಲ್ಲಿ ಕೊಡುವ ಯೋಜನೆ: ಬಿಪಿಎಲ್‌ ಕುಟುಂಬಗಳ ಮಹಿಳಾ ಸದಸ್ಯರ ಹೆಸರಿನಲ್ಲಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವುದಾಗಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಘೋಷಿಸಿದ್ದಾರೆ. ‘ಈ ಯೋಜನೆಗೆ 2016–17ನೇ ಸಾಲಿನಲ್ಲಿ ರೂ.2 ಸಾವಿರ ಕೋಟಿ ಮೀಸಲಿಡಲಾಗುವುದು. ಪ್ರಸಕ್ತ ವರ್ಷದಲ್ಲಿ 1.50 ಕೋಟಿ ಕುಟುಂಬಗಳಿಗೆ ಉಪಯೋಗವಾಗಲಿದೆ. 2 ವರ್ಷಗಳ ಕಾಲ ಈ ಯೋಜನೆ ಜಾರಿಯಲ್ಲಿರುತ್ತದೆ. ಇದರಿಂದ ಒಟ್ಟು 5 ಕೋಟಿ ಬಿಪಿಎಲ್‌ ಕುಟುಂಬಗಳು ಯೋಜನೆಯ ಲಾಭ ಪಡೆಯಲಿವೆ’ ಎಂದು ವಿವರಿಸಿದರು. ಬಿಪಿಎಲ್‌ ಕುಟುಂಬಕ್ಕೆ ರೂ.1 ಲಕ್ಷದ ಆರೋಗ್ಯ ವಿಮೆ: ಆರೋಗ್ಯ ರಕ್ಷಣಾ ಯೋಜನೆ ಅಡಿ ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬಕ್ಕೆ ₹1 ಲಕ್ಷ ಮೊತ್ತದ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಈ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. 60 ವರ್ಷ ಮತ್ತು ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ರೂ.30 ಸಾವಿರ ದೊರೆಯಲಿದೆ. ಡಯಾಲಿಸಿಸ್‌ ಕೇಂದ್ರ: ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವವರಿಗೆ ನೆರವಾಗಲು ರಾಷ್ಟ್ರೀಯ ಡಯಾಲಿಸಿಸ್‌ ಸೇವಾ ಯೋಜನೆ ಆರಂಭಿಸಲಾಗುವುದು. ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಸಂಖ್ಯೆ ಹೆಚ್ಚುತ್ತಿದ್ದು, ಪ್ರತಿ ವರ್ಷ 2.2 ಲಕ್ಷ ಮಂದಿ ಹೊಸ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ಡಯಾಲಿಸಿಸ್‌ ಕೇಂದ್ರಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ವಿವರಿಸಿದರು. ಪ್ರಸ್ತುತ ಸುಮಾರು 4,950 ಡಯಾಲಿಸಿಸ್‌ ಕೇಂದ್ರಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನಗರಗಳಲ್ಲಿವೆ. ಪ್ರತಿ ಬಾರಿ ಡಯಾಲಿಸಿಸ್‌ ಮಾಡಿಸಿಕೊಳ್ಳಲು ಸುಮಾರು ರೂ.2ಸಾವಿರ ವೆಚ್ಚವಾಗುತ್ತದೆ. ಬಹುತೇಕ ರೋಗಿಗಳು ಈ ಚಿಕಿತ್ಸೆ ಪಡೆಯಲು ದೂರದ ನಗರಗಳಿಗೆ ತೆರಳುವ ಪರಿಸ್ಥಿತಿ ಇದೆ. ಹೀಗಾಗಿ ರಾಷ್ಟ್ರೀಯ ಆರೋಗ್ಯ ಮಿಷನ್‌ ಅಡಿಯಲ್ಲಿ ಸಾರ್ವಜನಿಕ–ಖಾಸಗಿ ಸಹಭಾಗಿತ್ವದ ಮೂಲಕ ರಾಷ್ಟ್ರೀಯ ಡಯಾಲಿಸಿಸ್‌ ಸೇವಾ ಯೋಜನೆಗೆ ಹಣಕಾಸು ಒದಗಿಸಿ ಎಲ್ಲ ಜಿಲ್ಲಾ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಚಿಕಿತ್ಸೆಯ ವೆಚ್ಚ ಕಡಿಮೆ ಮಾಡಲು ಡಯಾಲಿಸಿಸ್‌ ಯಂತ್ರದ ಕೆಲವು ಉಪಕರಣಗಳ ಮೇಲಿನ ಸೀಮಾ ಹಾಗೂ ಅಬಕಾರಿ ಸುಂಕಗಳ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದರು. ಆರೋಗ್ಯ ಕ್ಷೇತ್ರದ ಅನುದಾನ ರೂ.38 ಸಾವಿರ ಕೋಟಿ. ಕಳೆದ ಬಾರಿಯ ಅನುದಾನರೂ.34 ಸಾವಿರ ಕೋಟಿ == ಬಜೆಟ್ ವಿವರ == ಇ–ನ್ಯಾಯಾಲಯ: ಇ–ನ್ಯಾಯಾಲಯಗಳ ಸ್ಥಾಪನೆ, ಕೆಳ ಹಂತದ ನ್ಯಾಯಾಲಯಗಳ ಸಾಮರ್ಥ್ಯ ಹೆಚ್ಚಳ, ನ್ಯಾಯಾಂಗ ಸುಧಾರಣೆಗೆ ಒತ್ತು ನೀಡಲಾಗಿದೆ. ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿಗೆ ಅನುಕೂಲವಾಗಲು ಈ ಬಾರಿಯ ಬಜೆಟ್‌ನಲ್ಲಿ ನ್ಯಾಯಾಂಗ ಇಲಾಖೆಗೆ ₹900 ಕೋಟಿ ಅನುದಾನ ನಿಗದಿ ಪಡಿಸಲಾಗಿದೆ. ರಕ್ಷಣಾ ಕ್ಷೇತ್ರಕ್ಕೆ ರೂ.2.58 ಲಕ್ಷ ಕೋಟಿ: ರಕ್ಷಣಾ ಕ್ಷೇತ್ರಕ್ಕೆ ಒಟ್ಟು ರೂ.2.58 ಲಕ್ಷ ಕೋಟಿ ಅನುದಾನ ನಿಗದಿಪಡಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 9.76ರಷ್ಟು ಹೆಚ್ಚಳವಾಗಿದೆ. ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆಯನ್ನು ಜಾರಿ ಮಾಡಿರುವುದರಿಂದ ರೂ.82 ಸಾವಿರ ಕೋಟಿ ಹೆಚ್ಚುವರಿ ಹೊರೆಯಾಗಲಿದೆ. ಹೀಗಾಗಿ ರಕ್ಷಣಾ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ದೊಡ್ಡ ಮೊತ್ತವನ್ನು ನಿಗದಿಪಡಿಸಲಾಗಿದೆ. ಉನ್ನತ ಶಿಕ್ಷಣ ಹಣಕಾಸು ಸಂಸ್ಥೆ ಸ್ಥಾಪನೆಗೆ ನಿರ್ಧಾರ: ಐಐಟಿ ಒಳಗೊಂಡಂತೆ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ರೂ.1000 ಕೋಟಿ ಮೂಲ ಬಂಡವಾಳದೊಂದಿಗೆ ಉನ್ನತ ಶಿಕ್ಷಣ ಹಣಕಾಸು ಸಂಸ್ಥೆ (ಎಚ್‌ಇಎಫ್‌ಎ) ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. 10 ಸಾವ೯ಜನಿಕ ಹಾಗೂ 10 ಖಾಸಗಿ ಶಿಕ್ಷಣ ಸ೦ಸ್ಥೆಗಳನ್ನು ವಿಶ್ವದಜೆ೯ ಮಟ್ಟಕ್ಕೇರಿಸಿ ಸ೦ಶೋಧನಾ ಕೇ೦ದ್ರಗಳನ್ನಾಗಿಸಲು ನಿಧಾ೯ರ. 62 ಹೊಸ ನವೋದಯ ಶಾಲೆಗಳ ಆರ೦ಭ, ಶಾಲೆಗಳ ಎಲ್ಲ ದಾಖಲೆಗಳ ಡಿಜಿಟಲೀಕರಣ. === ಜಮಾ-ಖರ್ಚು ಪೈಸೆ ಲೆಖ್ಖದಲ್ಲಿ ಮತ್ತು ಮುಖ್ಯ ವಿಂಗಡಣೆ === == ಇತರೆ ಹೊಸ ಯೋಜನೆಗಳು == ಒಟ್ಟು ಬಜೆಟ್ ಗಾತ್ರ : ರೂ.19.78 ಲಕ್ಷ ಕೋಟಿ ಮಹಿಳಾ ಪರ ನೋಟ ಮಹಿಳೆಯರ ಅಭಿವೃದ್ಧಿಗೆ ನೀಡುವ ಅನುದಾನವನ್ನು ಹೆಚ್ಚಿಸಲಾಗಿದೆ. ಈ ಪ್ರಮಾಣ ಕಳೆದ ಬಜೆಟ್‌ಗಿಂತ ಶೇ 11.5ರಷ್ಟು ಏರಿಕೆಯಾಗಿದೆ. ಮಹಿಳೆಯರಿಗಾಗಿ ಇರುವ ಯೋಜನೆಗಳಿಗೆ ₹90,624 ಕೋಟಿ ಮೀಸಲಿರಿಸಲಾಗಿದೆ. ಕಳೆದ ಬಜೆಟ್‌ನಲ್ಲಿ ಈ ಪ್ರಮಾಣ ₹81,249 ಕೋಟಿ ಇತ್ತು. ಶೇ ನೂರರಷ್ಟು ಹಣವನ್ನು ಮಹಿಳೆಯರಿಗಾಗಿ ವೆಚ್ಚ ಮಾಡುವ ಯೋಜನೆಗಳು ಮತ್ತು ಕನಿಷ್ಠ ಶೇ 30ರಷ್ಟು ಮೊತ್ತವನ್ನು ಮಹಿಳೆಯರಿಗಾಗಿ ವಿನಿಯೋಗಿಸುವ ಯೋಜನೆಗಳನ್ನು ಲೆಕ್ಕ ಹಾಕಿ ಈ ಮೊತ್ತವನ್ನು ಕಂಡುಕೊಳ್ಳಲಾಗುತ್ತದೆ. ಆರೋಗ್ಯ, ಶಿಕ್ಷಣ ಮುಂತಾದ ವಲಯಗಳಲ್ಲಿ ಮಹಿಳೆಯರಿಗೆ ಮೀಸಲಿರಿಸಿದ ಮೊತ್ತವನ್ನು ಹೆಚ್ಚಿಸಲಾಗಿದೆ. ಆದರೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಖಾತೆಗೆ ನೀಡಿದ ಅನುದಾನದಲ್ಲಿ ಅಲ್ಪ ಏರಿಕೆಯನ್ನಷ್ಟೇ ಮಾಡಲಾಗಿದೆ. ಕಳೆದ ಬಜೆಟ್‌ನಲ್ಲಿ ₹17,351 ಕೋಟಿಯಿದ್ದ ಈ ಮೊತ್ತ ಈಗ ₹17,408 ಕೋಟಿಗೆ ಏರಿಕೆಯಾಗಿದೆ. ಹೊಸ ಘೋಷಣೆಗಳು ರಸ್ತೆ ಅಭಿವೃದ್ಧಿಗೆ ₹ 97 ಸಾವಿರ ಕೋಟಿ: ಎಲ್ಲಾ ಸ್ವರೂಪದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದ್ದು, ಒಟ್ಟು ₹ 97 ಸಾವಿರ ಕೋಟಿ ಮೀಸಲಿಡಲಾಗಿದೆ. ರಸ್ತೆ ಮತ್ತು ಹೆದ್ದಾರಿಗಳ ಅಭಿವೃದ್ಧಿಗೆ ₹ 55 ಸಾವಿರ ಕೋಟಿ. ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ₹ 27 ಸಾವಿರ ಕೋಟಿ ಬಿಪಿಎಲ್‌ ಕುಟುಂಬಕ್ಕೆ ₹1 ಲಕ್ಷ ಮೊತ್ತದ ಆರೋಗ್ಯ ವಿಮೆ: ಆರೋಗ್ಯ ರಕ್ಷಣಾ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬಕ್ಕೆ ₹1 ಲಕ್ಷ ಮೊತ್ತದ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಗ್ರಾಮೀಣ ಉದ್ಯೋಗ ಖಾತರಿಗೆ ₹38,500 ಕೋಟಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ (ನರೇಗಾ) ₹38,500 ಕೋಟಿ ಅನುದಾನ ನೀಡಲಾಗಿದೆ. ‘ಸ್ವಚ್ಛ ಭಾರತ’ ಆಂದೋಲನಕ್ಕೆ ₹11,300 ಸಾವಿರ ಕೋಟಿ ಮೀಸಲು. ಶೇ 100 ವಿದ್ಯುತ್ ಸಂಪರ್ಕ ಗುರಿ: 2018ರ ಮೇ ವೇಳೆಗೆ ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ. ಇದಕ್ಕಾಗಿ ₹8,500 ಕೋಟಿ ವೆಚ್ಚ 28.5 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ:ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಬಲಪಡಿಸುವ ಮೂಲಕ 28.5 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ‘ಆಧಾರ್‌’ ಶಾಸನಬದ್ಧಗೊಳಿಸಲು ನಿರ್ಧಾರ:ಸರ್ಕಾರದ ಸಬ್ಸಿಡಿ ಸೌಲಭ್ಯಗಳ ಲಾಭ ನೇರವಾಗಿ ಗ್ರಾಹಕರಿಗೆ ತಲುಪುವಂತಾಗಲು ‘ಆಧಾರ್‌’ಅನ್ನು ಶಾಸನಬದ್ಧಗೊಳಿಸಲು ನಿರ್ಧರಿಸಲಾಗಿದೆ. ಸ್ಟಾರ್ಟ್ಅಪ್‌ಗಳಿಗೆ ತೆರಿಗೆ ವಿನಾಯ್ತಿ: ಸ್ಟಾರ್ಟ್‌ಅಪ್‌ಗಳಿಗೆ ಮೊದಲ ಮೂರು ವರ್ಷ ಶೇ 100ರಷ್ಟು ತೆರಿಗೆ ವಿನಾಯ್ತಿ ನೀಡಲಾಗಿದೆ. ಇಪಿಎಫ್‌ ವಾಪಸಾತಿ ಮೇಲೆ ತೆರಿಗೆ ಗೊಬ್ಬರ ಸಬ್ಸಿಡಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಏ.14ಕ್ಕೆ ಎಪಿಎಂಸಿಗಳಲ್ಲಿ ಇ–ವಹಿವಾಟು ಆರಂಭ == 2016-17ರ ಆದಾಯ (ವೆಚ್ಚದ) ವಿವರವಾದ ತಃಖ್ತೆ == 2016-17ರ ಆದಾಯದ ಹೆಚ್ಚಿನ ವಿವರ -ಕೇಂದ್ರ ಸರ್ಕಾರದ ಪ್ರಕಟಣೆ:(ಮೇಲಿನ ಆದಾಯ ವೆಚ್ಚ ಪಟ್ಟಿ ಪತ್ರಿಕೆಯ ಪ್ರಕಟಣೆ) (ಕೋಟಿ ರೂಪಾಯಿಗಳಲ್ಲಿ ) [://..//20160327043242/://../ub2016-17//. 2016-03-27 ವೇಬ್ಯಾಕ್ ಮೆಷಿನ್ ನಲ್ಲಿ.] 2016-03-27 ವೇಬ್ಯಾಕ್ ಮೆಷಿನ್ ನಲ್ಲಿ./ == 2016-17ರ ವೆಚ್ಚದ ವಿವರವಾದ ತಃಖ್ತೆ == 2016-17ರ ವೆಚ್ಚದ ವಿವರ: ಆಧಾರ: == ನೋಡಿ == ಆದಾಯ ತೆರಿಗೆ ಭಾರತದ ಕೇಂದ್ರ ಸರ್ಕಾರದ ಮುಂಗಡ ಪತ್ರ ೨೦೧೫-೧೬ ಬಜೆಟ್ ಸಿದ್ಧವಾಗುವುದು ಹೇಗೆ? ಕರ್ನಾಟಕ ಸರ್ಕಾರದ ಮುಂಗಡ ಪತ್ರ-2015-2016 ಭಾರತೀಯ 500 ಮತ್ತು 1000 ರೂಪಾಯಿ ಕರೆನ್ಸಿ ಚಲಾವಣೆ ರದ್ದಿಯಾತಿ == ಆಧಾರ985616087007 == 8970851961 ೧.ಪ್ರಜಾವಾಣಿ:೧-೩-೨೦೧೬ [೨] ೨.://../ub2016-17//. ೩.://../. == ಉಲ್ಲೇಖ ==